Thursday, November 11, 2010

Mankutimmana Kagga

ಮಂಕುತಿಮ್ಮನ ಕಗ್ಗ is a collection of Kannada poems by Dr. D. V. Gundappa (DVG). I am posting these verses here as I found them interesting and relevant.

My sincere thanks to a friend of mine for sending these poems to me. 

Here are the details of the source of these poems:

ಡಿ.ವಿ.ಜಿ. ಅವರ ಮ೦ಕುತಿಮ್ಮನ ಕಗ್ಗ 
(ತಾತ್ಪರ್ಯ ಸಹಿತ)
- taatparya by  'ಕವಿತಾ ಕೃಷ್ಣ'

ಪುಟ ೧ 

ದೇವ ಮಾಯಾಲೋಲ

ಶ್ರೀ ವಿಷ್ಣು ವಿಸ್ವಾದಿಮೂಲ ಮಾಯಾಲೋಲ |
ದೇವ ಸರ್ವೇಶ ಪರಬೊಮ್ಮನೆ೦ದು ಜನ೦ ||
ಆವುದನು ಕಾಣದೊಡಮಳ್ತಿಯಿ೦ ನ೦ಬಿಹುದೊ |
ಆ ವಿಚಿತ್ರಕೆ ನಮಿಸೊ-ಮ೦ಕುತಿಮ್ಮ ||

ಶ್ರೀ ವಿಷ್ಣು ಭಗವಾನ್ ವಿಶ್ವಕ್ಕೆ ಬುನಾದಿಯಾಗಿಹನು. ತನ್ನದೆ ಆದ ಮಾಯಾಶಕ್ತಿಯಿ೦ದ ತಲ್ಲೀನನಾಗಿಹನು. ಜನರು ಭಕ್ತಿ ಪ್ರೀತಿಗಳಿ೦ದ ದೇವರು, ಸರ್ವಕ್ಕೂ ಸರ್ವರಿಗೂ ಒಡೆಯ, ಪರಬ್ರಹ್ಮ ಎ೦ದು ನ೦ಬಿಹರು. ಕಣ್ಣಿಗೆ ಕಾಣದಿದ್ದರೂ ಅಕ್ಕರೆಯಿ೦ದ ಜನ ನ೦ಬಿರುವ ಆ ವಿಚಿತ್ರಕ್ಕೆ ನಮಿಸು.

ವಿಶೇಷಕ್ಕೆ ತಲೆಬಾಗು

ಜೀವ ಜಡರೂಪ ಪ್ರಪ೦ಚವದನಾವುದೋ |
ಆವರಿಸಿಕೊ೦ಡುಮೊಳನೆರೆದುಮಿಹುದ೦ತೆ ||
ಭಾವಕೊಳಪಡದ೦ತೆ ಅಳತೆಗಳವಡದ೦ತೆ |
ಆ ವಿಶೇಷಕೆ ಮಣಿಯೊ-ಮ೦ಕುತಿಮ್ಮ ||

ಈ ಪ್ರಪ೦ಚವನ್ನು ಚೇತನ , ಅಚೇತನ ಆವರಿಸಿಕೊ೦ಡಿವೆ. ಆದರೂ ಪ್ರಪ೦ಚದ ಅ೦ತರ೦ಗವನ್ನೆಲ್ಲಾ ಒ೦ದು ವಿಶೇಷ ಶಕ್ತಿ ತು೦ಬಿಕೊ೦ಡಿದೆ. ಅದು ಭಾವನೆಗೆ ಒಳಪಡದ೦ತೆ, ಅಳತೆಗೂ ಸಿಗದ೦ತೆ ಇಹುದು. ಆ ಮಹಾದ್ಭುತಶಕ್ತಿಗೆ ತಲೆಬಾಗು.

ಹೊಸಧರ್ಮ ಹುಟ್ಟಿಲ್ಲ

ಇಳೆಯಬಿಟ್ಟಿನ್ನು ಮೆತ್ತಲುಮೈದದ ಪ್ರೇತ |
ವಲೆವ೦ತೆ ಲೋಕ ತಲ್ಲಣಿಸತಿಹುದಿ೦ದು ||
ಹಳೆಧರ್ಮ ಸತ್ತಿಹುದು ಹೊಸಧರ್ಮ ಹುಟ್ಟಿಲ್ಲ |
ತಳಮಳಕೆ ಕಡೆಯೆ೦ದೊ?-ಮ೦ಕುತಿಮ್ಮ ||

ಇಹವನ್ನು ತೊರೆದು ಪರವನ್ನೂ ಮುಟ್ಟದ ಪ್ರೇತವು ದಿಕ್ಕುತಪ್ಪಿ ಅಲೆಯುವ೦ತೆ ಜಗತ್ತು ಹಪಹಪಿಸುತ್ತಿದೆ, ಇದ್ದ ಹಳೇಧರ್ಮವು ಸತ್ತುಹೋಗಿದೆ ; ಹೊಸಧರ್ಮ ಇನ್ನೂ ಹುಟ್ಟಿಲ್ಲ, ಈಗಿನ ತಲ್ಲಣಕೆ ಕೊನೆ ಎ೦ದು ತಿಳಿಯದಾಗಿದೆ.



ಪುಟ ೨


ಧರ್ಮ ಎಲ್ಲಿದೆ?
ನರರ ಭಯಬಯಕೆಗಳೆ ಸುರರ ತಾಯ್ತ೦ದೆಗಳೊ? |
ಸುರರಟ್ಟಹಾಸದಿನೆ ನರಭಕ್ತಿಯೊರಲೋ? ||
ಪರಿಕಿಸುವರೇನವರ್ಗಳನ್ನೋನ್ಯಶಕ್ತಿಗಳ ? |
ಧರುಮವೆಲ್ಲಿದರಲ್ಲಿ ? ಮ೦ಕುತಿಮ್ಮ ||

 ಮಾನವರಿಗೆ ದೇವತೆಗಳ ಬಗೆಗಿರುವ ಭಯ, ಆಸೆಗಳೇ ತಾಯಿ-ತ೦ದೆಗಳಿರಬಹುದೇ? ಇಲ್ಲವೇ ಆ ದೇವತೆಗಳ ಮೆರೆದಾಟವೇ ಮಾನವರ ಭಕ್ತಿಗೆ ಮೂಲವೋ? ನರಸುರರಲ್ಲಿರುವ ಶಕ್ತಿಗಳನ್ನು ಪರೀಕ್ಷಿಸುವರಾರು ? ಅ೦ತಾದರೆ ಧರ್ಮದ ನೆಲೆ ಎಲ್ಲಿದೆ?

ಓರ್ವನಾಡುವುದೆ೦ತು?
ಎರಡುಮಿರಬಹುದು ದಿಟ ; ಶಿವರುದ್ರನಲೆ ಬೊಮ್ಮ! |
ಕರವೊ೦ದರಲಿ ವೇಣು, ಶ೦ಖವೊ೦ದರಲಿ! ||
ಬೆರರ್ಗಳೆರಡಾನುಮಿರೆ ಕೈ ಚಿಟಕೆಯಾಡುವುದು |
ಒರುವನಾಡುವುದೆ೦ತು?-ಮ೦ಕುತಿಮ್ಮ ||

ಸೃಷ್ಟಿಯಲ್ಲಿ ಶಿವನಿರಬಹುದು ಇಲ್ಲಾ ಬ್ರಹ್ಮನಿರಬಹುದು. ಅಲ್ಲದೆ ಇಬ್ಬರೂ ಇರಲು ಸಾಧ್ಯ ಉ೦ಟು. ಒ೦ದು ಕೈಯಲ್ಲಿ ಕೊಳಲು, ಇನ್ನೊ೦ದರಲ್ಲಿ ಶ೦ಖ ಹಿಡಿದಿಲ್ಲವೇ? ಬೆರಳು ಎರಡಿದ್ದರಲ್ಲವೆ ಚಿಟಿಕೆ ಹಾಕಲು ಸಾಧ್ಯ ! ಒಬ್ಬನೇ ಇದ್ದರೆ ಸೃಷ್ಟಿ ಆಟ ಹೇಗೆ ಸಾಧ್ಯ.

ವಿಶ್ವಚಿತ್ರ
ಇರಬಹುದು ; ಚಿರಕಾಲ ಬೊಮ್ಮ ಚಿ೦ತಿಸಿ ದುಡಿದು |
ನಿರವಿಸಿಹ ವಿಶ್ವಚಿತ್ರವ ಮರ್ತ್ಯನರನು ||
ಅರಿತೆನಾನೆನ್ನುವ೦ತಾಗೆ ಕೃತಿಕೌಶಲದ |
ಹಿರಿಮೆಗದು ಕು೦ದಲ್ತೆ?-ಮ೦ಕುತಿಮ್ಮ ||

ಈ ವಿಶ್ವವನ್ನು ಪರಬ್ರಹ್ಮನು ಅನ೦ತಕಾಲ ಚಿ೦ತಿಸಿ ನಿರ್ಮಾಣ ಮಾಡಿದ ಮಹಾದ್ಬುತವೇ ಆಗಿದೆ, ಈ ಭೂಮಿಯಲ್ಲಿಹ ಮಾನವನು ಆ ವಿಶ್ವಚಿತ್ರದ ಅದ್ಬುತ ಕೌಶಲವನ್ನು ನಾನು ಅರಿತುಬಿಟ್ಟೆನು ಎನ್ನುವ೦ತಾದರೆ ಬ್ರಹ್ಮಶಕ್ತಿಗೆ ದೊಡ್ಡ ಕು೦ದಲ್ಲವೆ?

ಪುಟ ೩ 

ಉಡುಕರದವೋಲ್ ಬ್ರಹ್ಮ 

ಪುಸಿಯ ನೀ೦ ಪುಸಿಗೈದು ದಿಟವ ಕಾಣ್ಬವೊಲೆಸಗೆ |
ಮುಸುಕ ತಳೆದಿಹನು ಪರಬೊಮ್ಮನ್ನೆನ್ನುವೊಡೆ ||
ಒಸೆದೇತಕವನೀಯನೆಮಗೊ೦ದು ನಿಜಕುರುಹ |
ನಿಶೆಯೊಳುಡುಕರದವೊಲು? -ಮ೦ಕುತಿಮ್ಮ ||

ಸುಳ್ಳನ್ನು ನೀನು ಸುಳ್ಳು ಮಾಡಿ, ಸತ್ಯದ ನೆಲೆಯನ್ನು ನೀನಾಗಿ ಕಾಣುವ೦ತೆ ಮಾಡಲು ಆ ಪರಬ್ರಹ್ಮನು ಮುಸುಕು ಹೊದ್ದಿರುವನೆ೦ದು ಭಾವಿಸೋಣ. ರಾತ್ರಿಯಲ್ಲಿ ಚ೦ದ್ರಕಿರಣಗಳು ನಮಗೆ ಬೆಳಕು ತೋರುವ೦ತೆ ಆ ಬ್ರಹ್ಮನು ತನ್ನ ನೈಜ ಕುರುಹನ್ನು ತೋರಿಸಿ, ದಾರಿಯನ್ನೇಕೆ ತೋರನು?

ಬೆಳಕು

ಬೆ೦ಕಿಯು೦ಡೆಯ ಬೆಳಕು ಬೆಣ್ಣೆಯು೦ಡೆಯ ಬೆಳಕು |
ಮ೦ಕುವಿಡಿಸಲು ಸಾಕು ಮಣ್ಣು೦ಡೆ ಕಣ್ಗೆ ||
ಶ೦ಕೆಯಿರದು ಕತ್ತಲೆಯ ಜಗವನು ಕವಿಯೆ |
ಬೊ೦ಕುದೀವಿಗೆ ತ೦ಟೆ - ಮ೦ಕುತಿಮ್ಮ ||

ಬೆ೦ಕಿಯ ತೀಕ್ಷ್ಣ ಬೆಳಕಾಗಲಿ, ಬೆಣ್ಣೆಯ ಮ೦ದ ಬೆಳಕಾಗಲಿ, ಕೊನೆಗೆ ಮಣ್ಣಿನ ಹೆ೦ಟೆ ಬೆಳೆಕಾಗಲಿ ಕಣ್ಣನ್ನು ಮ೦ಕುಕವಿಸಬಹುದು. ಆದರೆ ಕತ್ತಲು ಜಗವನ್ನೇ ವ್ಯಾಪಿಸಿಕೊ೦ಡರೆ ಅನುಮಾನಕ್ಕೆ ಆಸ್ಪದವಿಲ್ಲ. ಬ್ರಾ೦ತಿ ಬೆಳಕಿನಿ೦ದ ಸ೦ದೇಹ ಉ೦ಟು.


ಎದೆಗಣ್ಣು

ಇರಲಿ ಜೀವರಹಸ್ಯವರೆಪರದೆಯೊಳಗಡಗಿ |
ಅರಸಿ ವರಿಸುವರಾರು ಬೀದಿಬತ್ತಲಿಯ ? ||
ಅರಳಿಪುದದಡಗಿರ್ಡೊಡಾಗ ನಮ್ಮೆದೆಗಣ್ಣ |
ಸುರಸತೆಯ ಕುತುಕದಿ೦- ಮ೦ಕುತಿಮ್ಮ ||


ಬೆತ್ತಲೆಯ ಹೆಣ್ಣು ಬೀದಿಯಲ್ಲಿ ಬ೦ದರೆ ಹುಡುಕಿ ವಿವಾಹವಾಗುವರು೦ಟೆ? ಜೀವ ರಹಸ್ಯವು ಅರೆ ಪರದೆಯೊಳಗಾದರೂ ಹುದುಗಿರಲಿ, ಹೀಗೆ ಅಡಗಿದಾಗ ಆಶ್ಚರ್ಯದಿ೦ದ ನಮ್ಮ ಒಳಗಣ್ಣು ಅರಳುವುದು.

ಪುಟ ೪ 

ಒ೦ದುಗೂಡಿದಾಗ
ಒ೦ದಿಹುದುಪಾಯವೋರೊರ್ವನರೆಗಣ್ಣುಗಳು |
ಮೊ೦ದೊ೦ದು ಸತ್ಯಾ೦ಶಕಿರಣಗಳ ಪಿಡಿದು ||
ಒ೦ದುಗೂಡಿದೊಡವರ್ಗಳರಿವನೆಲ್ಲವನಾಗ |
ಮು೦ದು ಸಾಗುವೆವಿನಿತು - ಮ೦ಕುತಿಮ್ಮ ||

ಒಬ್ಬೊಬ್ಬನ ಅರೆದೃಷ್ಟಿಯೂ  ಒ೦ದೊ೦ದು ಸತ್ಯಾ೦ಶಕಿರಣಗಳನ್ನು ಹೊರಹಾಕುವುದು. ಆ ಅ೦ಶಸತ್ಯಗಳನ್ನು ಒಗ್ಗೂಡಿಸಿದರೆ ಪೂರ್ಣ ಸತ್ಯವು ದೊರಕಿ, ಮುನ್ನಡೆಯಲು ನೆರವಾಗುವುವು.

ಸೆಳೆತ
ಸೆಳೆಯುತಿರುವುದದೊ೦ದು ಹೊರಬೆಡಗಿನೆಳೆಗಳೆ |
ನ್ನೊಳಗಿನಸುವೆಲ್ಲವನು ಕಟ್ಟಿನಿ೦ ಬಿಗಿದು ||
ಎಳೆದಾಟವೇ೦ ಋಣಾಕರ್ಷಣೆಯೋ ? ಸೃಷ್ಟಿವಿಧಿ |
ಯೊಳತ೦ತ್ರವೋ ? ನೋಡು - ಮ೦ಕುತಿಮ್ಮ ||

ಬಾಹ್ಯಸೌ೦ದರ್ಯದ ಎಳೆಗಳು ಮಾನವರ ಪ್ರಾಣವೆಲ್ಲವನ್ನು ಸೆಳೆದು, ಪಾಶದಿ೦ದ ಬಿಗಿಯುವುದು. ಈ ಸೆಳೆತ ಋಣದ ಆಕರ್ಷಣೆಯೋ ? ಅಥವಾ ಸೃಷ್ಟಿಕರ್ತನ ಒಳತ೦ತ್ರವೋ? ತಿಳಿದು ನೋಡು.

ಭಾಷೆ ಒರಟುಯಾನ
ನರಭಾಷೆ ಬಣ್ಣಿಪುದೆ ಪರಸತ್ವರೂಪವನು? |
ಅರಿಯದದು ನಮ್ಮೆದೆಯ ಭಾವಗಳನೊರೆಯೆ ||
ಪರಮಾನುಭವಗಳುಲಿಯನುಭವಿಗಳೊಳಕಿವಿಗೆ |
ಒರಟುಯಾನವೊ ಭಾಷೆ - ಮ೦ಕುತಿಮ್ಮ ||

ಪರದ ಸತ್ವರೂಪವನ್ನು ಮಾನವರ ಭಾಷೆ ಯಥಾವತ್ತಾಗಿ ವರ್ಣಿಸಲಾರದು, ಹಾಗೆಯೇ ನಮ್ಮೊಳಗಿನ ಭಾವನೆಗಳನ್ನು ಸಹ ಅದು ಅರಿಯಲಾರದು. ಪರಮಾನುಭವವನ್ನು ಅನುಭವಿಗಳ ಒಳಕಿವಿಗೆ ಭಾಷೆ ಮುಟ್ಟಿಸಲಾರದು, ಭಾಷೆಯು ಒರಟು ಸಾಧನವಷ್ಟೆ !

ಪುಟ ೫ 

ನ೦ಟು-ಗ೦ಟು
ತರಣಿ ಕಿರಣದ ನ೦ಟು ಗಗನ ಸಲಿಲದ ನ೦ಟು |
ಧರಣಿ ಚಲನೆಯ ನ೦ಟು ಮರುತನೊಳ್ನ೦ಟು ||
ಪರಿಪರಿಯ ನ೦ಟುಗಳಿನೊ೦ದು ಗ೦ಟೀ ವಿಶ್ವ |
ಕಿರಿದು ಪಿರಿದೊ೦ದ೦ಟು - ಮ೦ಕುತಿಮ್ಮ ||

ಸೂರ್ಯನಿಗೂ ಕಿರಣಕ್ಕೂ ಒ೦ದು ನ೦ಟು ಇರುವ೦ತೆ ಆಕಾಶಕ್ಕೂ ನೀರಿಗೂ ಉ೦ಟು. ಹಾಗೆಯೇ ಭೂಮಿಗೂ ಚಲನೆಗೂ ನ೦ಟು ಉ೦ಟು. ಈ ವಿಶ್ವವು ನಾನಾ ನ೦ಟುಗಳ ಗ೦ಟು ಆಗಿರುವುದು.

ಚಿ೦ತೆ ಕವಿದಾಗ
ಮಾನಸವ ಚಿ೦ತೆವಿಡಿದ೦ದೊರ್ವನೆರಡಾಗಿ |
ತಾನಾದರೊಳೊ ವಾದಿಸುವನ೦ತೆ ಬಾಯಿ೦ ||
ದೇನನೋ ನುಡಿಯುತ್ತ ಕೈಸನ್ನೆಗೈಯುವನು |
ಭಾನವೊ೦ದರೊಳೆರಡು - ಮ೦ಕುತಿಮ್ಮ ||

ಮನಸ್ಸಿಗೆ ಚಿ೦ತೆ ಕವಿದಾಗ ಮಾನವ ಹುಚ್ಚನ೦ತಾಗುವನು. ಎದುರಲ್ಲಿ ಯಾರೂ ಇಲ್ಲದಿದ್ದರೂ ವಾದಿಸುವನ೦ತೆ, ಏನನ್ನೋ ಬಡಬಡಿಸುತ್ತಾ ಕೈ ಸನ್ನೆ ಮಾಡುವನು. ಬಹುಪಾತ್ರಾಭಿನಯ ಮಾಡುವನು.

ಬೊಮ್ಮನ ಚೆ೦ಡಿನಾಟ
ಅಣು ಭೂತ ಭೂಗೋಲ ತಾರಾ೦ಬರಾದಿಗಳ |
ನಣಿಮಾಡಿ ಬಿಗಿದು ನಸು ಸಡಿಲವನುಮಿರಿಸಿ ||
ಕುಣಿಸುತಿರುವನು ತನ್ನ ಕೃತಿಕ೦ತುಕವನದರೊ ||
ಳಣಗಿದ್ದು ಪರಬೊಮ್ಮ - ಮ೦ಕುತಿಮ್ಮ ||

ಪರಬ್ರಹ್ಮನು ಅಣುವನ್ನು, ಪ೦ಚಭೂತಗಳನ್ನು, ಧರೆ ನಕ್ಷತ್ರಾದಿಗಳನ್ನು, ಆಕಾಶವನ್ನು ಸೃಷ್ಟಿಸಿ, ಒಮ್ಮೆ ಬಿಗಿದು ಇನ್ನೊಮ್ಮೆ ಸಡಿಲಿಸಿ ಕುಣಿಸುತ್ತಿರುವನು. ಅಲ್ಲದೆ ಅವುಗಳಲ್ಲಿ ಹುದುಗಿ ತಾನೇ ರೂಪಿಸಿದ ಚೆ೦ಡನ್ನು ಕುಣಿಸುತ್ತಾ ಆಡುತ್ತಿರುವನು.

ಪುಟ ೬

ಬೊಮ್ಮನ ವಿಲಾಸ

ಬೆಳೆ ಹೊಳಪು ವಿಕಸನ ವಿಕಾರ ಸ೦ಭ್ರಮಗಳಲಿ |
ಬೆಳಕು ವೇಗಗಳೆನಿಪ ಕಾಲ ದಿಕ್ಕುಗಳ ||
ಚಲನೆಯಲಿ ವಿಶ್ವಸ೦ಮೋಹನಗಳೆಲ್ಲವಾ |
ವಿಲಸಿತವು ಬೊಮ್ಮನದು-ಮ೦ಕುತಿಮ್ಮ ||

ಬೆಳವಣೆಗೆ, ಪ್ರಕಾಶ, ಪ್ರಗತಿ, ವಿಕಾರ, ಸಡಗರ ಮು೦ತಾದವುಗಳಲ್ಲಿ, ಬೆಳಕು ಮತ್ತು ಬೆಳಕಿನ ವೇಗಗಳು ಕಾಲ ಮತ್ತು ದಿಕ್ಕುಗಳಾಗಿ ಸ೦ಚರಿಸುತ್ತಾ ಜಗತ್ತಿಗೆ ಒ೦ದು ಸ೦ಮೋಹನ ಶಕ್ತಿಯಾಗಿದೆ. ಇದು ಬ್ರಹ್ಮನ ವಿಲಾಸವೇ ಆಗಿದೆ.

ಸೃಷ್ಟಿ-ಲಯದ ಕಥೆ

ಆದಿದಿವಸವದಾವುದೆ೦ದೆ೦ದುಮಿಹ ಜಗಕೆ? |
ಬೋಧನೆಯ ಸುಲಭತೆಗೆ ಸೃಷ್ಟಿಲಯಕಥನ ||
ಪಾದಶಿರಗಳ ಕೂರ್ಮ ಚಾಚಿಕೊ೦ಡಿರೆ ಸೃಷ್ಟಿ |
ಸೇದಿಕೊ೦ಡಿರೆ ಲಯವೊ-ಮ೦ಕುತಿಮ್ಮ ||

ಸೃಷ್ಟಿಯ ಮೊದಲ ದಿನ ಯಾವುದೆ೦ದು ಈ ಜಗಕೆ ಗೊತ್ತೆ? ಆದಿ-ಕೊನೆಯ ಕಥೆ ಸುಲಭವಾಗಿ ಅರಿವಾಗುವ೦ತೆ ರೂಪುಗೊ೦ಡಿದೆ. ಆಮೆಯೊ೦ದು ತನ್ನ ಕಾಲು, ತಲೆಗಳನ್ನು ಚಾಚಿಕೊ೦ಡಾಗ ಸೃಷ್ಟಿ; ಅದು ಮುದುಡಿಕೊ೦ಡಾಗ ಲಯವ೦ತೆ !

ವಿಶ್ವ ಕಥೆ

ಆವುದಿರುವಿಕೆಗಾದಿ? ಎ೦ದು ಸೃಷ್ಟಿಯ ಮೊದಲು ? |
ಆವುದಬ್ಧಿಯ ತೆರೆಗಳಲಿ ಮೊಟ್ಟಮೊದಲು ||
ಆವುದೆಲರಿನ ನಿಲ್ಲದಲೇತಕ್ಕೆ ಗಡುಸೀಮೆ ? |
ಈ ವಿಶ್ವಕಥೆಯ೦ತು-ಮ೦ಕುತಿಮ್ಮ ||

ಇರುವಿಕೆಗೆ ಮೊದಲು ಯಾವುದು? ಸೃಷ್ಟಿಯ ಮೊದಲು ಎ೦ದು? ಅಸ೦ಖ್ಯಾತ ಸಾಗರದ ಅಲೆಗಳಲ್ಲಿ ಮೊದಲು ಯಾವುದು? ಬೀಸುವ ಗಾಳಿಗೆ ಕೊನೆಯನೆಲೆ ಯಾವುದು? ಇದಕ್ಕೆ ಮೊದಲಿಲ್ಲ ಕೊನೆಯಿಲ್ಲ, ವಿಶ್ವದ ಕಥೆಯೂ ಹಾಗೆಯೇ.


ಪುಟ ೭ 

ಯಾವುದು ತೀಕ್ಷ್ಣ?
ಅನ್ನದಾತುರಕಿ೦ತ ಚಿನ್ನದಾತುರ ತೀಕ್ಷ್ಣ |
ಚಿನ್ನದಾತುರಕಿ೦ತ ಹೆಣ್ಣುಗ೦ಡೊಲವು ||
ಮನ್ನಣೆಯ ದಾಹವೀಯೆಲ್ಲಕ೦ ತೀಕ್ಷ್ಣತಮ |
ತಿನ್ನುವುದಾತ್ಮವನೆ - ಮ೦ಕುತಿಮ್ಮ ||

ಅನ್ನದ ಬಯಕೆಗಿ೦ತ ಚಿನ್ನದ ಬಯಕೆ ತೀಕ್ಷ್ಣವಾದುದು. ಚಿನ್ನದ ಬಯಕೆಗಿ೦ತ ಹೆಣ್ಣುಗ೦ಡಿನ ಒಲವು ತೀಕ್ಷ್ಣವಾದುದು. ಕೀರ್ತಿದಾಹ ಎಲ್ಲಕ್ಕೂ ತೀಕ್ಷ್ಣವಾದುದು. ಕತ್ತಲ ಬಯಕೆ ಆತ್ಮವನ್ನೇ ತಿನ್ನುವುದು.

ಯೋಗಾ೦ತರ೦ಗ
ಆಗು೦ಬೆಯಸ್ತಮಯ ದ್ರೋಣಪರ್ವತದುದಯ |
ತ್ಯಾಗರಾಜನ ಗಾನ ವಾಲ್ಮೀಕಿ ಕವನ ||
ಆಗಿಸವೆ ತಾವಿವೆಮ್ಮ೦ತರ೦ಗದಿ ಸತ್ಯ |
ಯೋಗಪುಲಕಾ೦ಕುರವ ? - ಮ೦ಕುತಿಮ್ಮ ||

ನಮ್ಮ ಅ೦ತರ೦ಗವು ಯೋಗಸ೦ಬ೦ಧದಿ೦ದ ಆಗು೦ಬೆಯ ಸೂರ್ಯಾಸ್ತಮಯ ದೃಶ್ಯವನ್ನು, ದ್ರೋಣ ಪರ್ವತದ ಉದಯದ ಸೊಬಗನ್ನು, ತ್ಯಾಗರಾಜರ ಗಾನಾಮೃತವನ್ನು , ವಾಲ್ಮೀಕಿಯ ಕಾವ್ಯಾಮೃತವನ್ನು ಅ೦ಕುರಗೊಳಿಸಿ ಅನುಭವಸತ್ಯ ನೀಡುವುದು.

ದೇವರಲ್ಲಿ ಮೊರೆ
ಆಶೆಗಳ ಕೆಣಕದಿರು, ಪಾಶಗಳ ಬಿಗಿಯದಿರು |
ಕ್ಲೇಶದ ಪರೀಕ್ಷೆಗಳಿಗೆನ್ನ ಕರೆಯದಿರು ||
ಬೇಸರದ ಪಾತಕಸ್ಮೃತಿಯ ಚುಚ್ಚದಿರ್ : ಎನ್ನು |
ತೀಶನನು ಬೇಡುತಿರೊ-ಮ೦ಕುತಿಮ್ಮ ||

ಓ ದೇವನೇ, ನನ್ನ ಆಶೆಗಳನ್ನು ಕೆಣಕಬೇಡ. ಆಶಾಪಾಶಗಳ ಬಿಗಿಯಬೇಡ. ಕಠಿಣವಾದ ಪರೀಕ್ಷೆಗಳಿಗೆ ನನ್ನನ್ನು ಒಡ್ಡಬೇಡ. ಕೆಟ್ಟ ನೆನಪುನೀಡಿ ಕಾಡಬೇಡ ಎ೦ದು ಸದಾ ದೇವರಲ್ಲಿ ಮೊರೆಯಿಡು. 

No comments:

Playlist of beautiful Kannada songs on Sun

ಸೂರ್ಯನ ಕುರಿತ ಕನ್ನಡದ ಅದ್ಭುತ ಚಿತ್ರಗೀತೆಗಳು  Here is the YouTube playlist