Sunday, September 9, 2018

ದೇವರು - ಯಾವ ದೇವರು?

ನಾವು ಮಾಡಿರೋ ದೇವರೋ ಅಥವಾ ನಮ್ಮನ್ನು ಮಾಡಿದ ದೇವರೋ?

ಅದೊಂದು ಕುಟುಂಬ ನನ್ನ ಕುಟುಂಬವೇ ಎಂದಿಟ್ಟುಕೊಳ್ಳೋಣ. ಆ ಕುಟುಂಬದಲ್ಲಿ ನಾಲ್ಕು ಮಂದಿ - ಗಂಡ, ಹೆಂಡತಿ ಮತ್ತಿಬ್ಬರು ಮಕ್ಕಳು; ಮಗಳಿಗೆ ನಾಲ್ಕು ವರ್ಷ, ಮಗನಿಗೆ ಒಂದೂಕಾಲು ವರ್ಷ. ಆ ಕುಟುಂಬ ವಾಸಿಸುವುದು ಅಮೆರಿಕೆಯಲ್ಲಿ. ರಜೆಗೆಂದು ಭಾರತಕ್ಕೆ ತೆರಳಿದ್ದು ರಜೆ ಮುಗಿಸಿ ಮರಳಿ ಅಮೆರಿಕೆಗೆ ಹೊರಡುವ ಸಮಯ ಬಂದಿತ್ತು.

ಭಾರತದಲ್ಲಿ ನಮ್ಮ ಮನೆ ಇದ್ದದ್ದು ದಾವಣಗೆರೆಯಲ್ಲಿ. ದಾವಣಗೆರೆಯಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಸುಮಾರು ಮುನ್ನೂರು ಕಿಲೋಮೀಟರ್ ದೂರ. ಏನೂ ಅಡಚಣೆ ಇಲ್ಲದೆ ಸಾಗಿದರೆ ಸರಿಸುಮಾರು ಐದು ತಾಸಿನ ದಾರಿ. ಈ ಪ್ರಯಾಣಕ್ಕೆ ಸಜ್ಜಾಗುತ್ತಿದ್ದ ನಾವು ಕೊನೆಯ ಘಳಿಗೆಯ ಲಗೇಜಿನ ಪರಿಶೀಲನೆ ನಡೆಸುತ್ತಿದ್ದೆವು. ಉಡುಗೊರೆಯಾಗಿ ಬಂದ ಗಣೇಶನ ವಿಗ್ರಹವೊಂದು ಯಾವ ಬ್ಯಾಗಿನಲ್ಲೂ ಜಾಗವಿಲ್ಲದ ಕಾರಣ ಮನೆಯಲ್ಲಿಯೇ ಉಳಿಯಬೇಕಾದ ಪರಿಸ್ಥಿತಿ ಬಂದಿತ್ತು. ಆದರೆ ಮನೆಯವರ ಬಲವಂತದಿಂದ  ಏರ್ಲೈನ್ಸ್ನವರ ಮಿತಿಗಿಂತಲೂ  ಎರಡು ಕಿಲೋಗ್ರಾಮ್ ಹೆಚ್ಚಾದರೂ ಅದನ್ನು ಕೊಂಡುಹೋಗಬೇಕಾಗಿ ಬಂದಿತು. ನಾನು ಅನುಮಾನಿಸುತ್ತಿರುವಾಗ ನನ್ನ ತಂದೆಯವರು, "ಈ ಗಣೇಶನಿಗೆ ನಿನ್ನಿಂದ ಪೂಜೆ ಮಾಡುಸ್ಕೊಬೇಕು ಅಂತಿದ್ರೆ ಹೇಗಾದರೂ ಮಾಡಿ ನಿನ್ನ ಜೊತೆ ಬರ್ತಾನೆ. ಯೋಚನೆ ಮಾಡಬೇಡ" ಎಂದರು. ಸರಿ ಏನೋ ಧೈರ್ಯ ಮಾಡಿ ಲಗೇಜ್ ಸ್ವಲ್ಪ ಭಾರವಾದರೂ ಗಣೇಶನನ್ನು ಜೊತೆಯಲ್ಲಿಯೇ ಕರೆದುಕೊಂಡು ಹೊರೆಟೆವು.

ನಮ್ಮನ್ನು ವಿಮಾನ ನಿಲ್ದಾಣಕ್ಕೆ ಕರೆದೊಯ್ಯಲು ಒಂದು ಟ್ರಾಕ್ಸ್ ಕ್ರೂಸರ್ ವಾಹನವು ಸಜ್ಜಾಗಿ ಮನೆಯ ಹೊರಗಡೆ ನಿಂತಿತ್ತು. ಅದರಲ್ಲಿ ನಮ್ಮ ಸಾಮಾನುಗಳನ್ನೆಲ್ಲ ಜೋಡಿಸಿ ನಮ್ಮ ಕುಟುಂಬವು ಪ್ರಯಾಣ ಬೆಳೆಸಿತು. ನಾವು ದಾವಣಗೆರೆಯಿಂದ ಹೊರಟಾಗ ವಿಮಾನವು ಹೋರಾಡಲು ಸುಮಾರು ಎಂಟು ತಾಸು ಸಮಯವಿತ್ತು. ಹಾಗಾಗಿ ಸರಿಯಾದ ಸಮಯಕ್ಕೆ ತಲುಪುವೆವು ಎಂದು ಸ್ವಲ್ಪ ನಿದ್ದೆ ಮಾಡಲು ಮುಂದಾದೆನು. ವಾಹನ ಚಾಲಕನು ವೇಗ ಮಿತಿಗಿಂತಲೂ ಸ್ವಲ್ಪ ನಿಧಾನವಾಗಿಯೇ ಚಲಿಸುತ್ತಿದ್ದನು. ಹೀಗೆಯೇ ಸುಮಾರು ಎರಡೂವರೆ ತಾಸಿನ ಬಳಿಕ ಚಕ್ರದ ಬಳಿ ಏನೋ ಶಬ್ದವಾಗಿ ಎಚ್ಚರವಾಯಿತು. ಅದೇ  ಸಮಯದಲ್ಲಿ ನನ್ನ ತಂದೆಯವರ ದೂರವಾಣಿ ಕರೆಯೂ ಬಂದಿತು. ಅವರಿಗೆ "ಟೈರ್ ಪಂಚರ್ ಆಗಿರ್ಬೇಕು ನೋಡ್ತೀನಿ" ಎಂದು ಹೇಳಿ ಕರೆಯನ್ನು ಕಟ್ ಮಾಡಿದೆನು. ಚಾಲಕನಿಗೆ ಸ್ಟೆಪ್ನಿ ಇದೆಯಾ ಎಂದು ಕೇಳಿ ಇದೆ ಎಂದು ಉತ್ತರ ಬಂದಾಗ ಸ್ವಲ್ಪ ಧೈರ್ಯ ಬಂದಿತು. ಆಗ ಸಮಯ ರಾತ್ರಿ ಸುಮಾರು ಹತ್ತು ಘಂಟೆಯಾಗಿತ್ತು.

ವಾಹನವು ಯಾವುದೋ ಒಂದು ಮೇಲ್ಸುತುವೆಯ ಮೇಲೆ ನಿಂತಿತ್ತು. ಸೇತುವೆಯ ಮೇಲೆ ನಿಂತಿದ್ದ ಕಾರಣ ಕೊನೆಯ ಲೇನಿನಲ್ಲೇ ನಿಂತಿತ್ತು. ಹಿಂದಿನಿಂದ ಬರುತ್ತಿದ್ದ ವಾಹನಗಳು ಲೇನ್ ಬದಲಾಯಿಸಿ ಪಕ್ಕಕ್ಕೆ ಹೋಗುತ್ತಿದ್ದವು (ಅದೃಷ್ಟವಶಾತ್!). ನಾನು ನನ್ನ ಫೋನಿನ ಫ್ಲಾಶ್ ಲೈಟ್ ಉಪಯೋಗಿಸಿ ಚಾಲಕನಿಗೆ ಚಕ್ರವನ್ನು ಬದಲಾಯಿಸಲು ಬೆಳಕು ಹಿಡಿದೆನು. ಚಕ್ರವು ಬರ್ಸ್ಟ್ ಆದಂತೆ ಕಾಣುತ್ತಿತ್ತು. ಇನ್ನು ಏನಿದ್ದರೂ ಸ್ಟೆಪ್ನಿ ನಂಬಿಕೊಂಡೇ ವಿಮಾನ ನಿಲ್ದಾಣ ಮುಟ್ಟಬೇಕಿತ್ತು. ಆದರೆ ಜಾಕ್ ಸರಿ ಇಲ್ಲದ ಕಾರಣ ಸ್ಟೆಪ್ನಿಯನ್ನು ಸಹ ಕೂರಿಸಲು ಆಗಲಿಲ್ಲ. ಆಗ ನನಗೆ ವಿಮಾನವು ನಮ್ಮನ್ನು ಇಲ್ಲಿಯೇ ಬಿಟ್ಟು ಹಾರಬಹುದು ಎಂದೆನಿಸಿತು. ಅದಕ್ಕಿಂತ ಹೆಚ್ಚಾಗಿ ಆ ಕತ್ತಲೆಯಿಂದ ನನ್ನ ಕುಟುಂಬವನ್ನು ಹೇಗೆ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಬೇಕು ಎಂದು ಘಾಬರಿಯಾದೆನು.

ಹೀಗೆ ಯೋಚಿಸುತ್ತಿರುವಾಗ ಯಾವುದೋ ಒಂದು ವಾಹನವು ಸ್ವಲ್ಪ ಮುಂದೆ ಹೋಗಿ ನಿಲ್ಲಿಸಿತು. ಆ ವಾಹನದಿಂದ ನಾಲ್ಕು ಜನ ಯುವಕರು ಕೆಳಗಿಳಿದು ನಮ್ಮ ವಾಹನದ ಬಳಿ ಬಂದರು. ಮೊದಲು ಸ್ವಲ್ಪ ಗಾಬರಿಯಾದ ನಾನು ನಂತರ ಅವರು ಏನಾಗಿದೆ ಏನಾದರು ಸಹಾಯ ಬೇಕೇ ಎಂದು ವಿಚಾರಿಸಿದಾಗ ಸ್ವಲ್ಪ ಸಮಾಧಾನತಂದುಕೊಂಡೆನು. ಅವರ ಬಳಿ ಸರಿಯಾದ ಜಾಕ್ ಇದ್ದೀತು. ಅವರ ಸಹಾಯದಿಂದ ಸ್ಟೆಪ್ನಿಯನ್ನು ಜೋಡಿಸಲಾಯಿತು. ಆದರೆ ಆ ಚಕ್ರದಲ್ಲಿ ಕಡಿಮೆ ಹವೆಯಿತ್ತು. ಆದ್ದರಿಂದ ಆ ಯುವಕರ ವಾಹನದಲ್ಲಿ ನಾನು ಮತ್ತು ನನ್ನ ಕುಟುಂಬವು ಪಂಚರ್ ಶಾಪ್ ವರೆಗೂ ಪ್ರಯಾಣ ಬೆಳೆಸಿದೆವು. ಇಷ್ಟರಲ್ಲಿ ಕೇವಲ ಸ್ಟೆಪ್ನಿಯನ್ನು ನಂಬಿಕೊಂಡು ವಿಮಾನ ನಿಲ್ದಾಣ ತಲುಪುವುದು ಆಗಲಾರದೆಂದು ನನ್ನ ಅಣ್ಣನಿಗೆ ಕರೆ ಮಾಡಿ ಯಾವುದಾದರೂ ಇನ್ನೊಂದು ವಾಹನದ ಬಗ್ಗೆ ವಿಚಾರಿಸಿದೆನು. ನಾವು ಸಿರಾ ಪಟ್ಟಣದಿಂದ ಸುಮಾರು ಹತ್ತು ಕಿಲೋಮೀಟರ್ ದೂರದಲ್ಲಿದ್ದೆವು.

ಪಂಚರ್ ಶಾಪ್ ಬಳಿ ಬಂದು ನೋಡಿದಾಗ ಆ ಸ್ಟೆಪ್ನಿಯ ಸ್ಥಿತಿ ಹೇಗಿತ್ತೆಂದರೆ ಅದರಲ್ಲಿ ಹವೆ ನಿಲ್ಲುತ್ತಲೆ ಇರಲಿಲ್ಲ. ನಾವು ದಾವಣಗೆರೆಯಿಂದ ಹೊರಟ ವಾಹನವು ಮುಂದೆ ಹೋಗುವ ಹಾಗಿರಲಿಲ್ಲ. ಹಾಗಾಗಿ ಪಂಚರ್ ಶಾಪಿನ ವಿಳಾಸ ತಿಳಿಸಿ ಇನ್ನೊಂದು ವಾಹನ ಬರಲು ಖಚಿತಪಡಿಸಿದೆನು. ಆ ವಾಹನವು ಇಪ್ಪತ್ತು ನಿಮಿಷದಲ್ಲಿ ನಾವಿದ್ದ ಬಳಿ ಬಂದಿತು. ಎಲ್ಲಾ ಸಾಮಾನುಗಳನ್ನು ಈ ವಾಹನಕ್ಕೆ ಸ್ಥಳಾಂತರಿಸಿ ನಾವು ವಿಮಾನ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿದೆವು. ಆಗ ಸಮಯ ರಾತ್ರಿ ಸುಮಾರು ಹನ್ನೊಂದು ಗಂಟೆ ಮೂವತ್ತು ನಿಮಿಷಗಳು. ಅಲ್ಲಿಂದ ವಿಮಾನ ನಿಲ್ದಾಣ ತಲುಪಲು ಇನ್ನೂ ಎರಡು ಗಂಟೆ ಮೂವತ್ತು ನಿಮಿಷ ಬೇಕಿತ್ತು, ಅದು ಏನೂ ಅಡಚಣೆ ಇಲ್ಲದಿದ್ದರೆ. ದೇವರ ಮೇಲೆ ಭಾರವನ್ನು ಹಾಕಿ ನಮ್ಮ ಪ್ರಯಾಣ ಸಾಗಿಸಿದೆವು.

ನಾವು ಸರ್ವಿಸ್ ರೋಡ್ನಿಂದ ಹೊರಟು ಹೆದ್ದಾರಿ ಹಿಡಿದ ಕೆಲವೇ ಕ್ಷಣಗಳಲ್ಲಿ ವಾಹನದ ಎಂಜಿನ್ ನಿಂತುಬಿಟ್ಟಿತು. ಚಾಲಕನು ವಾಹನವನ್ನು ಹೆದ್ದಾರಿ ಪಕ್ಕಕ್ಕೆ ನಿಲ್ಲಿಸಲು ಒಮ್ಮೆಲೇ ಭಯವಾಯಿತು. ಇದೇನಪ್ಪ ಹೊಸ ತೊಂದರೆ ಎಂದು ಆಲೋಚಿಸುತ್ತ ಚಾಲಕನಿಗೆ ಕೇಳಿದೆನು, "ಏನ್ ಸರ್ ಎಂಜಿನ್ ಟ್ರಬಲ್ ಇರೋ ಹಾಗಿದೆಯಲ್ಲ?". ಅದೇ ಸಮಯಕ್ಕೆ ಚಾಲಕನು ಇನ್ನೊಮ್ಮೆ ಎಂಜಿನ್ ಸ್ಟಾರ್ಟ್ ಮಾಡುತ್ತಲೇ, "ಒಂದೊಂದ್ ಸಾರಿ ಹೀಗೆ ಆಗುತ್ತೆ ಸರ್, ಹೆದರಬೇಡಿ" ಎಂದು ಸಮಾಧಾನ ಹೇಳಿದನು. ಮುಂದೇನೂ ಅಡಚಣೆ ಇಲ್ಲದೆ ಬೆಂಗಳೂರು ತಲುಪಿದೆವು. ಅಲ್ಲಿಂದ ವಿಮಾನ ನಿಲ್ದಾಣವು ಸುಮಾರು ನಲವತ್ತೈದು ನಿಮಿಷಗಳು. ಚಾಲಕನಿಗೆ ಕೊಡಲು ಹಣವಿಲ್ಲದ ಕಾರಣ ಅಲ್ಲಿಯೇ ಒಂದು ಏಟಿಎಂ ಹತ್ತಿರ ವಾಹನ ನಿಲ್ಲಿಸಲು ಹೇಳಿ ಹಣ ಬಿಡಿಸಿಕೊಂಡು ಬಂದೆನು.

ಕೊನೆಗೆ ನಾವು ವಿಮಾನ ನಿಲ್ದಾಣ ತಲುಪಿದಾಗ ಬೆಳಗಿನ ಜಾವ ಎರಡು ಗಂಟೆ ಹದಿನೈದು ನಿಮಿಷವಾಗಿತ್ತು. ತಾರಾತುರಿಯಲ್ಲೇ ಸಾಮಾನುಗಳೆನ್ನೆಲ್ಲ ಕೆಳಗಿಳಿಸಿಕೊಂಡು ವಿಮಾನ ನಿಲ್ದಾಣದ ಒಳಗೆ ಹೋದೆವು. ಏರ್ಲೈನ್ಸ್ನವರು ಇನ್ನೂ ಸಾಮಾನುಗಳನ್ನು ಸ್ವೀಕರಿಸುತ್ತಿದ್ದರು. ಹಾಗಾಗಿ ಚೆಕ್ ಇನ್ ಮಾಡಿ ನಮ್ಮ ಗೇಟ್ ಬಳಿ ತೆರಳಿ ಮನೆಗೆ ಕರೆ ಮಾಡಿ ತಿಳಿಸಿದೆವು. ಅಲ್ಲಿಯವರೆಗೂ ಅವರು ಘಾಬರಿಯಾಗಿಯೇ ಇದ್ದಂತಿತ್ತು. ನನ್ನ ತಾಯಿಯವರು "ನೋಡು ಗಣೇಶನ ವಿಗ್ರಹ ಬಿಟ್ಟು ಹೊರ್ಟಿಡ್ರಿ. ಅವನನ್ನ ಕರ್ಕೊಂಡು ಹೋಗಿದ್ದಕ್ಕೇನೆ ನಿಮ್ಮ ಎಲ್ಲಾ ವಿಘ್ನಗಳನ್ನೂ ದೂರ ಮಾಡಿದ್ದಾನೆ" ಎಂದರು. ನನ್ನ ತಂದೆಯವರು "ಗಣೇಶ ನಿಮ್ಮಿಂದ ಪೂಜೆ ಮಾಡಿಸ್ಕೊಳೋದಕ್ಕೆ ನಿಮ್ಮನ್ನು ಕರ್ಕೊಂಡು ಹೋಗಿದಾನೆ" ಎಂದರು.

ಎಲ್ಲವೂ ಸಿನಿಮೀಯ ರೀತಿಯಲ್ಲಿ ನಡೆದು ಹೋದಂತಿರಲು ನನಗನ್ನಿಸಿದ್ದು  ಇದು - ಗಣೇಶನು ನಮ್ಮನ್ನು ಕರೆದುಕೊಂಡು ಹೋದನೋ ಇಲ್ಲವೋ ನನಗೆ ತಿಳಿಯದು. ಆದರೆ ನಾವು ಆ ಕತ್ತಲಲ್ಲಿ ನಿಂತಿದ್ದಾಗ ನಮಗೆ ಪರಿಚಯವೇ ಇಲ್ಲದೆ ಸಹಾಯ ಮಾಡಿದ ಆ ಯುವಕರು ಹಾಗೂ ತಡರಾತ್ರಿಯಲ್ಲಿ ನಮ್ಮನ್ನು ಕರೆದೊಯ್ಯಲು ಸಿದ್ಧನಾದ ಸಿರಾ ಪಟ್ಟಣದ ಆ ಚಾಲಕ, ಇವರ ಸಹಾಯವಿಲ್ಲದೆ ನಾವು ವಿಮಾನ ನಿಲ್ದಾಣವನ್ನು ಸರಿಯಾದ ಸಮಯಕ್ಕೆ ತಲುಪಲು ಸಾಧ್ಯವಿರಲಿಲ್ಲ. ದೇವರಿಗೆ ಮಾತ್ರ ಕೃತಜ್ಞತೆ ಸಲ್ಲಿಸಿದರೆ ಆ ದೇವರು ಮೆಚ್ಚುತ್ತಾನೆಯೇ?!

1 comment:

Playlist of beautiful Kannada songs on Sun

ಸೂರ್ಯನ ಕುರಿತ ಕನ್ನಡದ ಅದ್ಭುತ ಚಿತ್ರಗೀತೆಗಳು  Here is the YouTube playlist